`ಮಕ್ಕಳಲ್ಲಿಯೂ ಯಕ್ಷಗಾನ ಅಭಿರುಚಿ ಬೆಳೆಸಿ` - ಪ್ರದೀಪ ಕುಮಾರ ಕಲ್ಕೂರು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 8 , 2013
|
ಶಿರಸಿ: ಯಕ್ಷಗಾನ ಕಲೆಯ ಕುರಿತು ಪ್ರತೀ ಮನೆಯಲ್ಲೂ ಆಸಕ್ತಿ ಬೆಳೆಯಬೇಕು. ಪ್ರತಿ ಮಗುವಿನಲ್ಲೂ ಯಕ್ಷಗಾನದ ಸದಭಿರುಚಿ ಕಲಿಸಬೇಕು. ಕಲೆಯ ಇನ್ನಷ್ಟು ಸೀಮೋಲಂಘನಕ್ಕೆ ಸಾಂಘಿಘಿಕ ಪ್ರಯತ್ನ ಆಗಬೇಕು ಎಂದು ದಕ್ಷಿಣ ಕನ್ನಡದ ಕಲ್ಕೂರು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರು ಆಶಿಸಿದರು.
|
ಪ್ರದೀಪ ಕುಮಾರ ಕಲ್ಕೂರು
|
ನಗರದ ಟಿಎಂಎಸ್ ಸಭಾಂಗಣದಲ್ಲಿ ಶನಿವಾರ ಸಂಜೆ ಮಂಗಳೂರಿನ ಯಕ್ಷಗಾನ ರಂಗ ಚಿಂತನ ಹಮ್ಮಿಕೊಂಡ ಕೆರೆಮನೆ ಶಂಭು ಹೆಗಡೆ ಜಯಂತಿ, ವಜ್ರಮಹೋತ್ಸವ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಕ್ಷಗಾನದ ಪ್ರಭುತ್ವ ದೇಶದ ಬೇರೆ ಬೇರೆ ಭಾಷೆಗಳಿಗೆ, ರಂಗಗಳಲ್ಲಿ ತೊಡಗಿಸಬೇಕು. ಅಂತಹ ಪ್ರಯತ್ನವನ್ನು ಆರಂಭಿಕವಾಗಿ ಮಾಡಿದವರು ಶಂಭು ಹೆಗಡೆ ಅವರು. ಅವರ ವಿದ್ವತ್ ಶಕ್ತಿಯ ಮೂಲಕವೇ ಕಲೆಯ ಸೀಮೋಲಂಘನದ ಪ್ರಯತ್ನವನ್ನೂ ಮಾಡಿದವರು ಎಂದು ನೆನಪಿಸಿದ ಕಲ್ಕೂರು, ಯಕ್ಷಗಾನ ಕಲೆಯ ಕುರಿತು ಶೈಕ್ಷಣಿಕ ವ್ಯವಸ್ಥೆಯಲ್ಲೂ ಬರಬೇಕು. ಮನೆ ಮನೆಯಲ್ಲೂ ಚಂಡೆ, ಗಾನ, ಮದ್ಧಲೆ, ತಾಳ, ಗೆಜ್ಜೆಯ ನಿನಾದ ಮೊಳಗುವಂತಾಗಬೇಕು. ಈ ಕಲೆಗೆ ಪ್ರೇಕ್ಷಕರ ಕೊರತೆ ಇಲ್ಲ. ಆದರೆ, ನಾವು ಭವಿಷ್ಯದ ಕಲಾಸಕ್ತರನ್ನು ಬೆಳೆಸುವಲ್ಲಿ ಎಡವುತ್ತಿದ್ದೇವೆ ಎಂದು ಆತಂಕಿಸಿದರು.
ಪ್ರಪಂಚಕ್ಕೆ ವಿಶಿಷ್ಟ ಕಾಣಿಕೆ ಕೊಟ್ಟ ಸಂಸ್ಕೃತಿ ನಮ್ಮದು. ಮಕ್ಕಳನ್ನು ಕೆಲವು ವಿಷಯಗಳಿಗೆ ಸೀಮಿತಗೊಳಿಸಿ ಸಣ್ಣದು ಮಾಡುತ್ತಿದ್ದೇವೆ. ಮಕ್ಕಳನ್ನು ನಾವು ರೋಬೋಟ್ ಮಾಡುತ್ತಿದ್ದೇವೆ ಎಂದ ಅವರು, ಯಕ್ಷಗಾನದ ಒಳಗೆ ಹೊರಕ್ಕರೆ ವಿಶಿಷ್ಟ ಅನುಭವ ಕೊಡುತ್ತದೆ. ದೇಹಕ್ಕೆ, ಮನಸ್ಸಿಗೆ ಆರೋಗ್ಯ ಕೊಡುತ್ತದೆ. ಯಕ್ಷಗಾನಕ್ಕೆ ಇನ್ನೊಬ್ಬ ಶಂಭು ಹೆಗಡೆ ಅವರಂತಹ ಕಲಾವಿದರು ಬರಬೇಕು ಎಂದೂ ಹೇಳಿದರು.
ಯಾರೂ ಇಲ್ಲ: ಯಕ್ಷಗಾನ ಕ್ಷೇತ್ರದಲ್ಲೇ ಶಂಭು ಹೆಗಡೆ ಅವರ ರಾಮನ ಪಾತ್ರದಂತೆ ಪಾತ್ರ ಮಾಡುವವರು ಯಾರೂ ಬಂದಿಲ್ಲ. ಅವರು ವಜ್ರದಂತೆ ಹೊಳಪಿನಂತೆ ಕಾಣುತ್ತಾರೆ. ವಜ್ರವನ್ನು ಹೊಳಪಿಗೆ, ಕಟುವಿಗೆ ಕೆತ್ತಿದಂತೆ ಪ್ರೇಕ್ಷಕರು ಅವರನ್ನು ಕೆತ್ತಿದಷ್ಟು ಯಾರನ್ನೂ ಪರೀಕ್ಷಿಸಿಲ್ಲ ಎಂದು ಮೇಲುಕೋಟೆ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಉಮಾಕಾಂತ ಭಟ್ಟ ಕೆರೇಕೈ ನೆನಪಿಸಿಕೊಂಡರು.
|
ಉಮಾಕಾಂತ ಭಟ್ಟ ಕೆರೇಕೈ
|
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೇ ಮೆರಗು ಕೊಟ್ಟ ಕಲಾವಿದರು. ಕೆರೆಮನೆ ಕುಟುಂಬವು ಕಲೆಗೆ ನೀಡಿದ ಕೊಡುಗೆ ದೊಡ್ಡದು ಎಂದು ವಿವರಿಸಿದರು.
ಸನ್ಮಾನಿತ ಮೃದಂಗ ವಾದಕ ಎ.ಪಿ.ಪಾಠಕ ಮಾತನಾಡಿ, ಬಿಗ್ಬಾಸ್ ಕಾರ್ಯಕ್ರಮದಲ್ಲಿ ಋಷಿಕಾ ಯಕ್ಷಗಾನವನ್ನು ಡಬ್ಟಾ ಎಂದು ಹೇಳಿ ವಿವಾದ ಸೃಷ್ಟಿಸಿದರು. ಅವರು ಶಂಭು ಹೆಗಡೆ ಅವರಂತಹ ಕಲಾವಿದರ ಪಾತ್ರ, ಕಲೆಯ ವೈಶಿಷ್ತ್ಯತೆ ನೋಡಿಲ್ಲ. ನೋಡಿದ್ದರೆ ಇಂತಹ ಮಾತು ಆಡುತ್ತಿರಲಿಲ್ಲ ಎಂದರು.
ಇನ್ನೋರ್ವ ಸನ್ಮಾನಿತ ಭಾಗವತ ವಿದ್ವಾನ್ ಗಣಪತಿ ಭಟ್ಟ ಮಾತನಾಡಿ, ಕಲಾವಿದರು ಕರ್ತವ್ಯವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಜಿ.ಕೆ.ಭಟ್ಟ ಸೇರಾಜೆ, ಲೋಕಧ್ವನಿ ಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರ ಅಭಿನಂದನಾ ನುಡಿಗಳನ್ನು ಆಡಿದರು. ಉಪನ್ಯಾಸಕ ಯೋಗೀಶ ಜಿ.ಸಾಗರ್, ಎನ್.ಪಿ.ಗಾಂವಕರ್, ಎಸ್.ಎಂ.ಹೆಗಡೆ ಹಡಿನಬಾಳ, ಯಕ್ಷಗಾನ ರಂಗ ಚಿಂತನದ ಅಧ್ಯಕ್ಷೆ ಶಾರದಾ ಹೆಗಡೆ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ವಹಿಸಿದ್ದರು.
ನೆಬ್ಬೂರು ನಾರಾಯಣ ಭಾಗವತ್ ಪ್ರಾರ್ಥಿಸಿದರು. ಕೋಟದ ಸಾಹಿತಿ ಜನಾರ್ಧನ ಎಚ್.ಹಂದೆ ಸ್ವಾಗತಿಸಿದರು. ವಿಶ್ವನಾಥ ಭಾಗವತ್ ತ್ಯಾರಗಲ್ ವಂದಿಸಿದರು. ಮಾಧುರಿ ಶ್ರೀರಾಮ ನಿರ್ವಹಿಸಿದರು.
ಕೃಪೆ : http://udayavani.com
|
|
|